ಗುಲ್ಶನ್ ದೇವಯ್ಯ

ಗುಲ್ಶನ್ ದೇವಯ್ಯ


ಗುಲ್ಶನ್ ದೇವಯ್ಯನವರು (ಜನನ: ಮೇ ೨೮, ೧೯೭೮) ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿರುವ ನಟರು. ಬೆಂಗಳೂರಿನವರಾದ ಇವರು ಕನ್ನಡಿಗರು ಮಾತ್ರವಲ್ಲದೆ, ಕೊಡವ ಜನಾಂಗದವರಾಗಿದ್ದು, ಕಂಬೆಯಂಡ ಮನೆತನಕ್ಕೆ ಸೇರಿದವರು.


ಜನನ, ಬಾಲ್ಯ ಮತ್ತು ವಿದ್ಯಾಭ್ಯಾಸ

ಗುಲ್ಶನ್ ಅವರು ಶ್ರೀ ದೇವಯ್ಯನವರು ಹಾಗೂ ತಾಯಿ ಶ್ರೀಮತಿ ಪುಷ್ಪಲತಾ ಅವರ ಏಕೈಕ ಪುತ್ರರಾಗಿ ಬೆಂಗಳೂರಿನ ಬಿ ಇ ಎಲ್ ಆಸ್ಪತ್ರೆಯಲ್ಲಿ ಜನಿಸಿದರು. ದೇವಯ್ಯ ದಂಪತಿಗಳಿಬ್ಬರೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿ ಇ ಎಲ್)ನಲ್ಲಿ ಉದ್ಯೋಗದಲ್ಲಿದ್ದು ನಿವೃತ್ತರಾದವರು. ಉದ್ಯೋಗದಲ್ಲಿದ್ದಾಗ ಇಬ್ಬರೂ ಸಾಹಿತ್ಯ, ಲಘು ಸಂಗೀತ, ಚಿತ್ರಕಲೆ, ನಾಟಕ, ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ಗುಲ್ಶನ್‌ನಲ್ಲೂ ಇದ್ದ ಕಲೆಗಾರಿಕೆಯನ್ನು ಗುರುತಿಸಿ, ಪ್ರೋತ್ಸಾಹಿಸಿದರು.


ಗುಲ್ಶನ್ ಬೆಂಗಳೂರಿನ ಕ್ಲೂನಿ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಸೈಂಟ್ ಜೋಸೆಫ್’ಸ್ ಇಂಡಿಯನ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ನಂತರ ಬಿ ಇ ಎಲ್ ಪದವಿಪೂರ್ವ ಕಾಲೆಜನ್ನು ಸೇರಿದರು. ಬಳಿಕ ೧೯೯೭ರಿಂದ ೨೦೦೦ರವರೆಗೆ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ(National Institute of Fashion Technology)ಯಿಂದ ಪ್ರಥಮ ಶ್ರೇಣಿಯಲ್ಲಿ ಪದವೀಧರರಾದರು.


ಉದ್ಯೋಗ

ಸುಮಾರು ಹತ್ತು ವರ್ಷಗಳವರೆಗೆ ಗುಲ್ಶನ್ ಫ್ಯಾಶನ್ ಉದ್ಯೋಗದಲ್ಲಿದ್ದರಲ್ಲದೆ, ಬೆಂಗಳೂರಿನ ವಿಗಾನ್ ಅಂಡ್ ಲೈ ಕಾಲೆಜಲ್ಲಿಅಧ್ಯಾಪಕರಾಗಿದ್ದರು.


ನಾಟಕರಂಗ

ಪ್ರಾಥಮಿಕ ಶಾಲೆಯ ನಾಟಕ-ಪ್ರಹನಗಳಲ್ಲೇ ಬಾಲಕ ಗುಲ್ಶನ್ ಮುಖ್ಯ ಪಾತ್ರಕ್ಕೆ ಆಯ್ಕೆಯಾಗುತ್ತಿದ್ದರು. ಕಾಲೆಜಿನಲ್ಲಿದ್ದಾಗಿನಿಂದ ಆರಂಭಿಸಿದ್ದು, ಫ್ಯಾಶನ್ ರಂಗದಲ್ಲಿ ಉದ್ಯೋಗದಲ್ಲಿರುವಾಗಲೂ ಬೆಂಗಳೂರಿನ ಹಲವಾರು ಆಂಗ್ಲ ಥಿಯೇಟರ್ ತಂಡಗಳಲ್ಲಿ ಅಭಿನಯಿಸಿ ಪ್ರಸಿದ್ಧರಾಗಿದ್ದಾರೆ. ನಯನತಾರಾ ರಾಯ್ ಅವರ ನಿರ್ದೇಶನದ "ಮ್ಯಾಡ್ನೆಸ್", ರಂಜನ್ ಗೋಶಾಲ್‌ರವರ ನಾಟಕ,"ಬಂಚರಾಮ್'ಸ್ ಆರ್ಚರ್ಡ್ಸ್" ‘ಮರೀಚ’ ಥಿಯೇಟರ್‌ನ ಎರಡು ನಾಟಕಗಳು; ಇವಲ್ಲದೆ ಬೆಂಗಳೂರಿನ ಆಂಗ್ಲ ನಾಟಕ ರಂಗಗಳಲ್ಲಿ ಹರಾಮಿ ಥಿಯೇಟರ್’ಸ್‌ನ "ಬಟರ್ ಅಂಡ್ ಮ್ಯಾಶ್ಡ್ ಬನಾನ" ಮೊದಲಾದ ನಾಟಕಗಳಲ್ಲಿ, ಅತ್ಯಂತ ಗಮನಾರ್ಹವಾಗಿ ಗುಲ್ಶನ್ ಗುರುತಿಸಲ್ಪಡುತ್ತಾರೆ. ವಿಮರ್ಶಕರಿಂದಲೂ ಪ್ರಶಂಸೆಗೊಳಗಾದ ಉತ್ಕೃಷ್ಟ ಅಭಿನಯದ ನಾಟಕವೆಂದರೆ ಕುವೆಂಪು ವಿರಚಿತ ನಾಟಕ, "ಸ್ಮಶಾನ ಕುರುಕ್ಷೇತ್ರ".


ಸಿನಿಮಾರಂಗ

ಗುಲ್ಶನ್‌ರವರ ಮೊದಲ ಚಿತ್ರ ಅನುರಾಗ್ ಕಶ್ಯಪ್ ನಿರ್ದೇಶನದ "ದ ಗರ್ಲ್ ಇನ್ ಯೆಲ್ಲೊ ಬೂಟ್ಸ್". ಇದರಲ್ಲಿ ಇವರ ಚಿಟ್ಟಿಯಪ್ಪ ಸಿದ್ದಪ್ಪ ಗೌಡ ಎನ್ನುವ ಕನ್ನಡಿಗ ಗ್ಯಾಂಗ್‌ಸ್ಟರ್‌ನ ಪಾತ್ರ ನೋಡುಗರ ಮನದಲ್ಲಿ ಅಚ್ಚಳಿಯದಂತೆ ನಿಂತಿದೆ. ಕಲ್ಕಿ ಕೇಕ್ಲಾನ್ (Koechlin) ಮತ್ತು ನಾಸಿರುದ್ದಿನ್ ಶಾ ಇವರ ಸಹನಟರಾಗಿದ್ದರು. ಈ ಚಿತ್ರವು ಟೊರನ್ಟೊ ಅಂತಾರಾಷ್ಟ್ರಿಯ ಫಿಲ್ಮ್ ಫೆಸ್ಟಿವಲ್ ಮತ್ತು ವೆನಿಸ್ ಫಿಲ್ಮ್ ಫೆಸ್ಟಿವಲಲ್ಲಿ ಪ್ರದರ್ಶನಗೊಂಡಿತು.

ಆದರೆ ಇದಕ್ಕಿಂತ ಮೊದಲು ೨೦೧೧ರಲ್ಲಿ ಬಿಡುಗಡೆಯಾದದು ಬೆಜೊಯ್ ನಂಬಿಯಾರ್ ನಿರ್ದೇಶನದ "ಶೈತಾನ್" ಹಿಂದಿ ಚಿತ್ರ. ಕರಣ್ ಕೆ ಸಿ ಚೌಧರಿಯ ನೆಗೆಟಿವ್ ಪಾತ್ರ ವಿಮರ್ಶಕರ ಮೆಚ್ಚುಗೆಯನ್ನು ಪಡೆದಿದೆ. ಈ ಚಿತ್ರದಲ್ಲಿನ ಅವರ ಅಭಿನಯವು ವಿಮರ್ಶಕರ ಮೆಚ್ಚುಗೆಯನ್ನು ಪಡೆದು, ಸಿನಿಮಾರಂಗದ ಮೊದಲ ಪ್ರವೇಶದ ಅತ್ಯುತ್ತಮ ನಟ (ಬೆಸ್ಟ್ ಮೇಲ್ ಡೆಬ್ಯೂ) ಹಾಗೂ ಅತ್ಯುತ್ತಮ ಪೋಷಕ ನಟನೆಂದು ಫಿಲ್ಮ್ ಫೇರ್ ಪ್ರಶಸ್ತಿಗಳಿಗೆ ಗುಲ್ಶನ್ ದೇವಯ್ಯ ನಾಮನಿರ್ದೇಶನಗೊಂಡಿದ್ದರು.

ಶೈತಾನ್ ಚಿತ್ರದ ಬಳಿಕ ೨೦೧೧ರಲ್ಲಿ ರೋಹನ್ ಸಿಪ್ಪಿ ನಿರ್ದೇಶನದ "ದಮ್ ಮಾರೋ ದಮ್" ಚಿತ್ರದಲ್ಲಿ ರಿಕ್ಕಿ ಎಂಬ ಹೆಸರಿನ ಗೋವಾದ ಮಾದಕ ವಸ್ತು ಸಾಗಾಟಗಾರನ ಪಾತ್ರ. ಸಣ್ಣದಾದರೂ, ನಯವಾಗಿ ಮಾತಾಡಿ ಕಪ್ಪು ದಂಧೆಯೊಳಕ್ಕೆ ತರುಣರನ್ನು ಬಲೆ ಬೀಸಿ ಹಿಡಿಯುವ ಚಾಣಾಕ್ಷನ ಪಾತ್ರದಲ್ಲಿ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದರು. ಅಭಿಷೇಕ್ ಬಚ್ಚನ್, ಬಿಪಾಶಾ ಬಸು ಮತ್ತಿ ಪ್ರತೀಕ್ ಬಬ್ಬರ್ ಮುಖ್ಯ ಪಾತ್ರಗಳಲ್ಲಿದ್ದರು.

ನಂತರ ೨೦೧೨ರಲ್ಲಿ ತೆರೆ ಕಂಡ ವಿವೇಕ್ ಅಗ್ನಿಹೋತ್ರಿಯವರ "ಹೇಟ್ ಸ್ಟೋರಿ"ಯಲ್ಲಿನ ಇವರ ಪಾತ್ರ ಧೂರ್ತ ವ್ಯಕ್ತಿತ್ವದ ಸಿದ್ಧಾರ್ಥ್ ಧನರಾಜಗಿರ್. ಚಿತ್ರ ವಿವಾದ-ಕುತೂಹಲಗಳಿಗೆ ಕಾರಣೀಭೂತವಾಗಿದ್ದರೂ ಗುಲ್ಶನ್ನರ ಶಕ್ತಿಯುತ ಅಭಿನಯ ಎಲ್ಲರ ಮನ ಮೆಚ್ಚುಗೆಯಾಯಿತು. ಇದೇ ವರ್ಷದ ಮತ್ತೊಂದು ಚಿತ್ರ ವಾಸನ್ ಬಾಲಾರವರ "ಪೆಡ್ಲರ್ಸ್" ಚಿತ್ರದಲ್ಲಿ ರಣಜಿತ್ ಡಿ’ಸೋಜನ ಪಾತ್ರದಿಂದ ಉತ್ತಮ ಅಭಿನಯಕ್ಕಾಗಿ ಗುಲ್ಶನ್ ಪ್ರಶಂಸಾಭಾಜನರಾಗಿದ್ದಾರೆ.

ವೈಯಕ್ತಿಕ ಜೀವನ

ನಿಜ ಜೀವನದಲ್ಲಿ ತುಂಬ ಸರಳ ಹಾಗೂ ಶಾಂತ ಸ್ವಭಾವದ ಗುಲ್ಶನ್ ಸ್ನೇಹಪ್ರಿಯರು. ಗ್ರೀಕ್ ಮೂಲದ ಕಲಿರೊಯ್ ಜಿಯಫೆಟ (Kallirroi Tziafeta) ಅವರನ್ನು ಮದುವೆಯಾಗಿದ್ದಾರೆ.

ಅಭಿನಯಿಸಿದ ಚಲಚ್ಚಿತ್ರಗಳು

ಕ್ರಮ ಸಂಖ್ಯೆ ಬಿಡುಗಡೆಯ ವರ್ಷ ಚಿತ್ರದ ಹೆಸರು ಭಾಷೆ ನಿರ್ದೇಶಕರು ಪಾತ್ರ
೨೦೧೧ ದ ಗರ್ಲ್ ಇನ್ ಯೆಲ್ಲೊ ಬೂಟ್ಸ್ ಹಿಂದಿ ಅನುರಾಗ್ ಕಶ್ಯಪ್ ಚಿಟ್ಟಿಯಪ್ಪ ಸಿದ್ದಣ್ಣ ಗೌಡ
೨೦೧೧ ದಮ್ ಮಾರೋ ದಮ್ ಹಿಂದಿ ರೋಹನ್ ಸಿಪ್ಪಿ ರಿಕ್ಕಿ
೨೦೧೧ ಶೈತಾನ್ ಹಿಂದಿ ಬೆಜೋಯ್ ನಂಬಿಯಾರ್ ಕರಣ್ ಕೆ ಸಿ ಚೌಧರಿ
೨೦೧೨ ಹೇಟ್ ಸ್ಟೋರಿ ಹಿಂದಿ ವಿವೇಕ್ ಅಗ್ನಿಹೋತ್ರಿ ಸಿದ್ಧಾರ್ಥ್ ಧನರಾಜಗಿರ್
೨೦೧೨ ಪೆಡ್ಲರ್ಸ್ ಹಿಂದಿ ವಾಸನ್ ಬಾಲಾ ರಣಜಿತ್ ಡಿ’ಸೋಜ
೨೦೧೩ ಗೋಲಿಯೋಂ ಕೀ ರಾಸ್‌ಲೀಲ ರಾಮ್ ಲೀಲ ಹಿಂದಿ ಸಂಜಯ್ ಲೀಲ ಭನ್ಸಲಿ ಭವಾನಿ
೨೦೧೫ ಹಂಟರ್ (ಮುಂಚಿನ ಹೆಸರು ವಾಸು) ಹಿಂದಿ ಹರ್ಷವರ್ಧನ್ ಕುಲಕರ್ಣಿ ಮಂದಾರ್ ಪೊಂಕ್ಶೆ

ಬಾಹ್ಯ ಸಂಪರ್ಕಗಳು