ಮಂಡ್ಯ ರಮೇಶ್

ಮಂಡ್ಯ ರಮೇಶ್
Bornಜುಲೈ ೧೪, ೧೯೬೪
ಮಂಡ್ಯ ಜಿಲ್ಲೆಯ ನಾಗಮಂಗಲ
Occupation(s)ರಂಗಭೂಮಿ ಕಲಾವಿದ, ನಿರ್ದೇಶಕ, ರಂಗತಜ್ಞ, 'ನಟನ' ರಂಗತಂಡದ ಸಂಸ್ಥಾಪಕ, ಚಲನಚಿತ್ರ ನಟ

ಮಂಡ್ಯ ರಮೇಶ್ (ಜುಲೈ ೧೪, ೧೯೬೪) ರಂಗಭೂಮಿ ತಜ್ಞರಾಗಿ, ನಟರಾಗಿ, ನಿರ್ದೇಶಕರಾಗಿ, ಅದ್ಭುತ ಕಲಾವಿದ, ಕಲಾಸಂಘಟಕ ಅಷ್ಟೇ ಅಲ್ಲದೇ ಅತ್ಯುತ್ತಮ ರಂಗಶಿಕ್ಷಕರೂ ಹೌದು. ಪ್ರಖ್ಯಾತ 'ನಟನ' ತಂಡದ ಸಂಸ್ಥಾಪಕರಾಗಿ, ಚಲನಚಿತ್ರ ರಂಗದಲ್ಲಿ ನೂರಾರು ಚಿತ್ರಗಳ ಯಶಸ್ವೀ ಕಲಾವಿದರಾಗಿ ಹೀಗೆ ಮಹತ್ವದ ಸಾಧನೆಗಳ ಕ್ರಿಯಾಶೀಲ ಕಲಾವಿದರು.ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನಿತರಾಗಿದ್ದರು. ಪ್ರಸ್ತುತ ಮಜಾಟಾಕೀಸ್ ನಲ್ಲಿ ಹಾಸ್ಯನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಜೀವನ

ಹುಟ್ಟೂರು ಮಂಡ್ಯ. ಪ್ರಸಿದ್ಧ ರಂಗಕರ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ್ ಜುಲೈ ೧೪, ೧೯೬೪ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ದಿ|| ಎನ್‌. ಸುಬ್ರಹ್ಮಣ್ಯಂ, ತಾಯಿ ದಿ|| ನಾಗಲಕ್ಷ್ಮೀ. ವಿಜ್ಞಾನ ಪದವೀಧರ.

ರಂಗಭೂಮಿಯಲ್ಲಿ

  • ರಮೇಶ್ ಬೆಳೆದದ್ದು ರಂಗಭೂಮಿಯ ಒಡನಾಟದಲ್ಲಿ. ನಿನಾಸಂ ನಾಟಕಶಾಲೆಯಲ್ಲಿ ಪದವಿ ಪಡೆದರು, ರಂಗಾಯಣದ ಕಲಾವಿದರಾಗಿ ಪಡೆದ ಶ್ರೀಮಂತ ಅನುಭವ ಅವರನ್ನು ಪಕ್ವರನ್ನಾಗಿಸಿತು. ಮಂಕ, ಮಂಡ್ಯದ ಗೆಳೆಯರ ಬಳಗ, ಮಾಂಡವ್ಯ ಕಲಾ ಸಂಘ, ವೇದಿಕೆ ಮುಂತಾದ ಹಲವಾರು ಸಂಘ ಸಂಸ್ಥೆಗಳೊಡನಾಟ, ಮೈಸೂರಿನ ನಟನ ರಂಗಶಾಲೆ, ಸಂಸ್ಥಾಪಕ, ಮುಖ್ಯಸ್ಥರಾಗಿ ಹೊತ್ತ ಜವಾಬ್ದಾರಿ. ಇವೆಲ್ಲಾ ಮಂಡ್ಯ ರಮೇಶ್ ಅವರ ಅಪಾರ ಸಾಧನೆಗಳಲ್ಲಿನ ಕೆಲವೊಂದು ತುಣುಕುಗಳು. "ಮಂಡ್ಯ ಅಂದ್ರೆ ಇಂಡಿಯಾ..!" "ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ" ಇವು ಹಳೆಯ ಮೈಸೂರು ಭಾಗದಲ್ಲಿ ಪ್ರಚಲಿತವಿರುವ ಸುಪ್ರಸಿದ್ಧ ನುಡಿಗಟ್ಟುಗಳು. ಸಕ್ಕರೆ ಸೀಮೆ ಎಂದೇ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆಯ ಜನರೂ ಅಲ್ಲಿ ಬೆಳೆವ ಕಬ್ಬಿನಂತೆ ಮೇಲು ನೋಟಕ್ಕೆ ಒರಟರಾದರೂ ಆಂತರ್ಯದಲ್ಲಿ ಮೃದು-ಮಧುರ..!
  • ತಾಯ್ನೆಲದ ಗುಣವನ್ನೇ ಮೈದುಂಬಿಸಿಕೊಂಡು ತಮ್ಮ ಮೃದು-ಮಧುರ ನಡುವಳಿಕೆಗಳಿಂದಾಗಿ "ಇಂಡಿಯಾ" ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದು ಅಭಿಮಾನಿ-ಶಿಷ್ಯ ಸಮೂಹವನ್ನು ಹೋದಲ್ಲೆಲ್ಲಾ ಸೃಷ್ಟಿಸುತ್ತಿರುವ ವ್ಯಕ್ತಿ-ರಂಗಭೂಮಿಯ ವಿಶಿಷ್ಟ ಶಕ್ತಿ "ಮಂಡ್ಯ ರಮೇಶ್." ತನ್ನೆದುರು ಸಿಕ್ಕ ಎಳೆಯರನ್ನು "ಕಂದಮ್ಮಾ.." ಎಂದೂ, ಹಿರಿಯರು ಮತ್ತು ಸಮವಯಸ್ಕರನ್ನು "ಗುರುಗಳೇ.." ಎನ್ನುತ್ತಾ, ಎಂದಿಗೂ ಮಾಸದ ಮಂದಹಾಸ, ಸ್ನೇಹಭಾವದೊಂದಿಗೆ ಮೋಡಿ ಮಾಡುವ ಮಂಡ್ಯ ರಮೇಶ್ ಓರ್ವ ಅದ್ಭುತ ಕಲಾವಿದ, ನಿರ್ದೇಶಕ, ಕಲಾಸಂಘಟಕ ಅಷ್ಟೇ ಅಲ್ಲದೇ ಅತ್ಯುತ್ತಮ ರಂಗಶಿಕ್ಷಕರೂ ಹೌದು. ಸಿನಿಮಾ, ಕಿರುತರೆಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದರೂ, ಕಲಾಪ್ರಪಂಚದಲ್ಲಿ ತನಗೊಂದು ಸ್ಥಾನ-ಮಾನ ದೊರಕಿಸಿಕೊಟ್ಟ ರಂಗಭೂಮಿಯನ್ನು ಬದುಕಿನ ಉಸಿರೆಂದು ಭಾವಿಸಿರುವ ಆದರ್ಶವಂತ.

ರಮೇಶ್ ನಿರ್ದೇಶನದ ನಾಟಕಗಳು

  1. ಸಂಕ್ರಾಂತಿ
  2. ಮಹಿಮಾಪುರ
  3. ಮಾರನಾಯಕ
  4. ಬಂಕಾಪುರದ ಬಯಲಾಟ
  5. ಚೋರ ಚರಣದಾಸ
  6. ನಾಗಮಂಡಲ
  7. ಅಗ್ನಿ ಮತ್ತು ಮಳೆ
  8. ಹರಕೆಯ ಕುರಿ
  9. ಆಲಿಬಾಬ
  10. ಯುಗಾಂತ
  11. ಐಲುದೊರೆ
  12. ಚಾಮಚೆಲುವೆ
  13. ಸಾಯೋ ಆಟ
  14. ವಲಸೆ ಹಕ್ಕಿಯ ಹಾಡು
  15. ಈ ಕೆಳಗಿನವರು
  16. ಊರುಭಂಗ
  17. ಸುಭದ್ರಾ ಕಲ್ಯಾಣ
  18. ರತ್ನಪಕ್ಸಿ
  19. ಅಂಧಯುಗ ಮುಂತಾದವು


  • ರಮೇಶ್ ನಿನಾಸಂ ತಿರುಗಾಟಯೋಜನೆ, ಕೊಡಗಿನ ಪ್ರಾದೇಶಿಕ ರೆಪರ್ಟರಿಯ ಸ್ಥಾಪಕ, ನಿರ್ದೇಶಕರಾಗಿ, ರಾಜ್ಯ, ಹೊರರಾಜ್ಯಗಳಾದ ಭೂಪಾಲ್‌, ದೆಹಲಿಯ ಅಂತಾರಾಷ್ಟ್ರೀಯ ನಾಟಕೋತ್ಸವಗಳಲ್ಲಿ ನಟರಾಗಿ, ತಂತ್ರಜ್ಞರಾಗಿ, ಮಂಡ್ಯದ ರಂಗಚಳುವಳಿಯ ನಟ, ನಿರ್ದೇಶಕ, ಸಂಘಟಕರಾಗಿ ಅನೇಕ ಬಗೆಯ ಕಾರ್ಯನಿರ್ವಹಣೆ ಮಾಡಿದ್ದಾರೆ.
  • ರಂಗಾಯಣ ತಂಡದೊಂದಿಗೆ ನ್ಯೂಯಾರ್ಕ್‌, ಜರ್ಮನಿ, ಆಸ್ಟ್ರಿಯಾಗಳಲ್ಲಿ ನಾಟಕ ಪ್ರದರ್ಶನ ಮಾಡಿ ಬಂದಿದ್ದಾರೆ. ನಾಗಮಂಗಲ ಕನ್ನಡ ಸಂಘ ಮುಂತಾದುವುಗಳಿಗಾಗಿ ಮಣ್ಣಿನ ಗಾಡಿ, ಡಾ. ಸಿದ್ರಾಜು ಸಾಹೇಬರು ಬರುತ್ತಿದ್ದಾರೆ, ಅಗ್ನಿ ಮತ್ತು ಮಳೆ, ಮಾರನಾಯಕ, ಈ ಕೆಳಗಿನವರು ಮುಂತಾದ ನಾಟಕಗಳ ಪ್ರದರ್ಶನ ನೀಡಿದ್ದಾರೆ.

ಧಾರಾವಾಹಿಗಳಲ್ಲಿ

  1. ಜನನಿ,
  2. ಮನೆತನ,
  3. ಫೋಟೋಗ್ರಾಫರ್ ಪರಮೇಶಿ
  4. ಮನೆತನ
  5. ಮಂಥನ
  6. ಒಂದೇ ಸುಳ್ಳು
  7. ಮಜಾ ಟಾಕೀಸ್
  8. ಪಂಚರಂಗಿ
  9. ಶ್ರೀರಸ್ತು ಶುಭಮಸ್ತು
  10. ಇವಳು ಸುಜಾತಾ ಇನ್ನು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಚಲನಚಿತ್ರ ರಂಗದಲ್ಲಿ

ಜನುಮದ ಜೋಡಿ ಮೂಲಕ ಚಿತ್ರರಂಗ ಪ್ರವೇಶಿಸಿದ ರಮೇಶ್ ತಾವು ಅಭಿನಯಿಸಿದ ಚಲನಚಿತ್ರಗಳ ಸಂಖ್ಯೆಯಿಂದ ಸೆಂಚುರಿ ಹೊಡೆದಿರುವುದಲ್ಲದೇ ಇನ್ನೂ ತಮ್ಮ ಜನಪ್ರಿಯ ಓಟವನ್ನು ಮುಂದುವರೆಸಿದ್ದಾರೆ; ಅವರು ನಟಿಸಿರುವ ಸಿನಿಮಾಗಳೆಂದರೆ-

  1. ಜನುಮದ ಜೋಡಿ
  2. ಕನಸುಗಾರ
  3. ನಾಗಮಂಡಲ
  4. ಅಮೃತಧಾರೆ
  5. ಮಠ
  6. ರನ್ನ
  7. ಗಜಕೇಸರಿ
  8. ಕಿರುಗೂರಿನ ಗಯ್ಯಾಳಿಗಳು
  9. ಪವರ್
  10. ಒಗ್ಗರಣೆ
  11. ಮುಸ್ಸಂಜೆ ಮಾತು
  12. ದೇವರ ನಾಡಲ್ಲಿ
  13. ಉಪ್ಪಿನ ಕಾಗದ
  14. ಲಾ
  15. ಪವರ್‌
  16. ದಿ ವಿಲನ್‌
  17. ಯಜಮಾನ -ಹೀಗೆ ಮುನ್ನೂರೈವತ್ತಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರಶಸ್ತಿ ಗೌರವಗಳು

ತಮ್ಮ ಕಿರಿ ವಯಸ್ಸಿನಲ್ಲೇ ಬಹಳಷ್ಟು ಸಾಧಿಸಿರುವ ಮಂಡ್ಯ ರಮೇಶ್ ಅವರಿಗೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಸಂದಿವೆ. ನಾಗಮಂಡಲ ಚಿತ್ರಕ್ಕಾಗಿ ರಾಜ್ಯ ಸರ್ಕಾರದ

  1. ಶ್ರೇಷ್ಠ ಪೋಷಕ ನಟ ಪ್ರಶಸ್ತಿ
  2. ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ (2017)
  3. ಆರ್ಯಭಟ ಪ್ರಶಸ್ತಿ
  4. ಮಂಗಳೂರಿನ ಸಂದೇಶ ಪ್ರಶಸ್ತಿ
  5. ಕೆ.ವಿ.ಶಂಕರೇಗೌಡ ಪ್ರಶಸ್ತಿ
  6. ರೋಟರಿ ನಮನ ಪ್ರಶಸ್ತಿ
  7. ನಾಟ್ಯಶ್ರೀ ಪ್ರಶಸ್ತಿ ಮೊದಲಾದುವು ಸಂದಿವೆ.

ಮಾಹಿತಿ ಕೃಪೆ

http://natanamysore.com/mandya-ramesh/ಮತ್ತು ಕಣಜ.

ಪ್ರಜಾವಾಣಿಯಲ್ಲಿ ಮಂಡ್ಯ ರಮೇಶ್ ಮಾತು