ಕೃತವರ್ಮ

ಕೃತವರ್ಮ ಇವನು ಯಾದವ ಸೇನಾನಿ. ಯಾದವರಲ್ಲಿ ಅಂಧಕ ಕುಲಕ್ಕ ಸೇರಿದವನು. ಮಹಾ ಪರಾಕ್ರಮಿ. ಕುರುಕ್ಷೇತ್ರ ಯುದ್ಧದಲ್ಲಿ ಇವನು ಯಾದವ ಸೇನೆಯೊಂದಿಗೆ ಕೌರವರ ಪರವಾಗಿ ಯುದ್ಧ ಮಾಡಿದನು.ಕೌರವರ ಕಡೆಯಿಂದ ಬದುಕುಳಿದ ಮೂರು ಜನರಲ್ಲಿ ಇವನೂ ಒಬ್ಬನು. ಅಶ್ವತ್ಥಾಮನೊಂದಿಗೆ ಸೇರಿ ದೃಷ್ಟದ್ಯುಮ್ನ ,ಶಿಖಂಡಿ ಮತ್ತು ಉಪಪಾಂಡವರ ಕಗ್ಗೊಲೆಯಲ್ಲಿ ಪಾಲ್ಗೊಂಡನು. ಯಾದವರ ಕೊನೆ ಕಾಲದಲ್ಲಿ ಇವನು ಸಾತ್ಯಕಿಯಿಂದ ಹತ್ಯೆಗೈಯಲ್ಪಟ್ಟನು.

ಮಹಾಭಾರತದಲ್ಲಿ

ಮಹಾಭಾರತದ ವೀರರಲೊಬ್ಬ, ಅತಿರಥ, ವೃಷ್ಣಿವಂಶದ ಅರಸು. ಹೃದಿಕ ಇವನ ತಂದೆ. ಭೋಜ, ಹಾರ್ವಿಕ, ಹಾರ್ದಿಕ್ಯ, ವಾಷ್ರ್ಣೇಯ, ವೃಷ್ಣಿಸಿಂಹ- ಎಂಬವು ಇವನ ನಾಮಾಂತರಗಳು. ಬಲರಾಮನ ಅಣತಿಯಂತೆ ಒಂದು ಅಕ್ಷೌಹಿಣೀ ಸೈನ್ಯದೊಡನೆ ಕೌರವ ಪಕ್ಷವನ್ನು ಸೇರಿ ಪಾಂಡವರ ವಿರುದ್ಧ ಯುದ್ಧ ಮಾಡಿದ. ಭೀಷ್ಮ ಅಭೇದ್ಯವಾದ ಕ್ರೌಂಚವ್ಯೂಹವನ್ನು ರಚಿಸಿ ಅದರ ಮುಖಸ್ಥಾನದಲ್ಲಿ ಇವನನ್ನು ನಿಲ್ಲಿಸಿದ. ಪಾಂಡವರ ಸೇನಾನಿ ದೃಷ್ಟದ್ಯುಮ್ನನ ಆಟ ಇವನ ಮುಂದೆ ಸಾಗಲಿಲ್ಲ. ಯುದ್ಧ ಮಧ್ಯದಲ್ಲಿ ಸಾತ್ಯಕಿ ಮೇಲೇರಿ ಬಂದು ಘಾತಿಸಿದಾಗ ಶಲ್ಯ ಇವನಿಗೆ ರಕ್ಷಣೆ ಕೊಟ್ಟ.

ದ್ರೋಣ ಗರುಡವ್ಯೂಹವನ್ನು ರಚಿಸಿದಾಗ ಗರುಡಾಕೃತಿಯ ಸೂಕ್ಷ್ಮಸ್ಥಳವಾದ ಅಕ್ಷಿಸ್ಥಾನದಲ್ಲಿ ಕೃತವರ್ಮನಿದ್ದ. ವ್ಯೂಹವನ್ನು ಭೇದಿಸಿಕೊಂಡು ಒಳನುಗ್ಗಿದ ಅಭಿಮನ್ಯುವನ್ನು ಆಕ್ರಮಿಸಿ ಘಾತಿಸಿದ ಆರು ಜನರಲ್ಲಿ ಇವನೊಬ್ಬ. ಅಭಿಮನ್ಯುವಿನ ಕುದುರೆಗಳನ್ನು ಈತ ಕೊಂದು ಅವನನ್ನು ವಿರಥನನ್ನಾಗಿ ಮಾಡಿದ. ಇವನಿಗೂ ಸಾತ್ಯಕಿಗೂ ಬದ್ಧದ್ವೇಷ. ಅರ್ಜುನ ಇವನ ರಥಾಶ್ವಗಳನ್ನು ಕೊಲ್ಲಲು ಸಾತ್ಯಕಿ ರಥವನ್ನೇ ನುಚ್ಚುನೂರಾಗಿಸಿದ. ಮಹಾಭಾರತದ ಯುದ್ಧದಲ್ಲಿ ಕೌರವರ ಕಡೆಯಲ್ಲಿ ಕೃಪ, ಅಶ್ವತ್ಥಾಮರ ಜೊತೆಗೆ ಈತನೂ ಉಳಿದ. ಅಶ್ವತ್ಥಾಮ ತಂದೆಯ ಮರಣದಿಂದ ಉದ್ವಿಗ್ನನಾಗಿ ಪಾಂಡವರ ಮೇಲೆ ರಾತ್ರಿಯುದ್ಧ ಮಾಡಲು ಹವಣಿಸಿದಾಗ ಈತ ತಡೆದು ನಿಷ್ಫಲನಾದ. ಕಡೆಗೆ ಊರುಭಂಗದಿಂದ ಪರಿತಪಿಸುತ್ತಿದ್ದ ದುರ್ಯೋಧನನನ್ನು ಸಂಧಿಸಿ ಆತನನ್ನು ಸಂತೈಸಿದ. ಕೃತವರ್ಮ ಶ್ರೀ ಕೃಷ್ಣನ ಅಚ್ಚುಮೆಚ್ಚಿನ ಅನುವರ್ತಿ. ಮೌಸಲಪರ್ವದಲಿ,್ಲ ಕುಡಿದು ಮತ್ತರಾದ ಯಾದವರಲ್ಲಿ ಕಲಹವಾದಾಗ ಸಾತ್ಯಕಿ ಇವನನ್ನು ಕೊಂದ.

ಇತರರು

ಇದೇ ಹೆಸರಿನ ಮತ್ತೊಬ್ಬ, ಸುಪ್ರಸಿದ್ಧ ಕಾರ್ತವೀರ್ಯಾರ್ಜುನನ ಚಿಕ್ಕಪ್ಪ. ಧನಕ (ಕನಕ) ಎಂಬ ಮಹಾರಾಜನ ದಾಯಾದಿಗಳಲ್ಲಿ-ಕೃತವೀರ್ಯ, ಕೃತೌಜ, ಕೃತವರ್ಮ, ಕೃತಾಗ್ನಿ ಎಂಬುವರಲ್ಲಿ-ಒಬ್ಬ.

ಕೃತವರ್ಮನೆಂಬ ಮತ್ತೊಬ್ಬ, ಪ್ರಸ್ತುತ ಅವಸರ್ಪಿಣೀಯುಗದ ಹದಿಮೂರನೆಯ ಜೈನತೀರ್ಥಂಕರನ ತಂದೆ.

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: